ಈ ಪುಸ್ತಕದ ಮೊದಲನೆಯ ಭಾಗವು ಕುಮಾರಿಲನ ಸಂದರ್ಭ ಮತ್ತು ಚಿಂತನೆಗಳ ಸ್ಥೂಲ ನೋಟವನ್ನು ಒದಗಿಸಿಕೊಡುತ್ತದೆ; ಎರಡನೆಯ ಭಾಗದಲ್ಲಿ ಈತನ ಆಯ್ದ ಬರಹಗಳ ಕನ್ನಡ ಅನುವಾದವಿದೆ. ಹಿನ್ನುಡಿಯಲ್ಲಿ ಕೀರ್ತಿನಾಥ ಕರ್ತಕೋಟಿಯವರು ಈ ಚಿಂತನೆಗಳು ಇವತ್ತಿನ ತಾತ್ವಿಕ ಮತ್ತು ಭಾಷಾಶಾಸ್ತ್ರೀಯ ಅಧ್ಯಯನಕ್ಕೂ ಹೇಗೆ ಉಪಯುಕ್ತ ಆಗಬಲ್ಲದು ಎಂಬುದನ್ನು ಕುರಿತು ಚರ್ಚೆಯೊಂದನ್ನು ಆರಂಭಿಸಿದ್ದಾರೆ.
A Kannada book by Akshara Prakashana / ಅಕ್ಷರ ಪ್ರಕಾಶನ
ಮೂಲತಃ ಕಾರ್ಕಳ ತಾಲೂಕಿನ ಮಾಳ ಗ್ರಾಮದವರು. ಎಂ.ಕಾಂ., ಹಿಂದೀ ಸಾಹಿತ್ಯರತ್ನ ಮತ್ತು ಯಕ್ಷಗಾನದಲ್ಲಿ ಪಿಎಚ್.ಡಿ. ಪದವೀಧರ. ಮಂಗಳೂರಿನ ಬೆಸೆಂಟ್ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಮತ್ತು ಪ್ರಾಂಶುಪಾಲರಾಗಿ ಸೇವೆ. ತಾಳಮದ್ದಲೆ ರಂಗದ ಪ್ರಮುಖ ಅರ್ಥದಾರಿಗಳಲ್ಲೊಬ್ಬರು. ಯಕ್ಷಗಾನ ವಿಮರ್ಶಕ, ಸಂಶೋಧಕ, ಸಂಘಟಕ, ಪ್ರವಚನಕಾರ, ಅಂಕಣಕಾರ, ಕವಿ. ಆಸಕ್ತಿಯ ಕ್ಷೇತ್ರಗಳು - ಅರ್ಥಶಾಸ್ತ್ರ, ತತ್ತ್ವಶಾಸ್ತ್ರ, ಕಲೆ, ಸಾಹಿತ್ಯ, ಶಿಕ್ಷಣ, ಸಮಾಜಕಾರ್ಯ, ಹಲವು ಸಂಘಸಂಸ್ಥೆಗಳೊಂದಿಗೆ ಸಕ್ರಿಯ ಸಂಪರ್ಕ. ಯಕ್ಷಗಾನ ಕುರಿತು ಹತ್ತು ವಿಮರ್ಶಾ ಕೃತಿಗಳೂ, ಸಂಪಾದಿತ ಕೃತಿಗಳೂ, ನೂರಾರು ಬಿಡಿಬರಹಗಳೂ ಪ್ರಕಟವಾಗಿವೆ.
ಮೂಲತಃ ಉತ್ತರ ಕನ್ನಡ ಸಿದ್ಧಾಪುರದ ಜೋಗಿನ್ಮನೆಯವರು. ಸಂಸ್ಕೃತದಲ್ಲಿ ಎಂ. ಎ. ಪದವೀಧರರು. ಸಿದ್ಧಾಪುರದ ಮಹಾತ್ಮಾಗಾಂಧೀ ಶತಾಬ್ದಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಮತ್ತು ಪ್ರಾಂಶುಪಾಲರಾಗಿ ಸೇವೆ. ಯಕ್ಷಗಾನ ಅರ್ಥದಾರಿ, ಪ್ರಸಂಗಕರ್ತ, ವೇಷಧಾರಿ. ತತ್ತ್ವಶಾಸ್ತ್ರ, ಅಲಂಕಾರಶಾಸ್ತ್ರ, ಮೊದಲಾದ ಶಾಸ್ತ್ರೀಯ ವಿಷಯಗಳಲ್ಲಿ ಇವರ ಕೆಲವು ಗ್ರಂಥಗಳೂ, ಹಲವು ಲೇಖನಗಳೂ ಪ್ರಕಟವಾಗಿವೆ. ಹದಿನೈದು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ.
ಕೀರ್ತಿನಾಥ ಕುರ್ತಕೋಟಿಯವರು ೧೩, ಅಕ್ಟೋಬರ್ ೧೯೨೮ರಂದು ಗದಗ ಸಮೀಪದ ಕುರ್ತಕೋಟಿಯಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಗದಗದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದು, ಮುಂದೆ ಸುಮಾರು ಮೂರು ದಶಕಗಳ ಕಾಲ ಗುಜರಾತಿನ ಆನಂದದ ವಲ್ಲಭ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು; ನಿವೃತ್ತಿಯ ನಂತರ ಧಾರವಾಡದಲ್ಲಿ ಬಂದು ನೆಲೆಸಿದರು. ಹಲವು ಭಾಷೆಗಳ ಸಾಹಿತ್ಯದ ಕುರಿತು ಮಾತಾಡಬಲ್ಲವರಾಗಿದ್ದ ಕೀರ್ತಿಯವರು ತಮ್ಮ ವಿದ್ವತ್ತು ಮತ್ತು ವಿಮರ್ಶೆಗಳಿಂದ ಪ್ರಸಿದ್ಧರು. ಬರವಣಿಗೆಯಷ್ಟೇ ತಮ್ಮ ವಾಗ್ಮಿತೆಗೂ ಪ್ರಸಿದ್ಧರಾಗಿದ್ದ ಇವರು ’ಯುಗಧರ್ಮ ಹಾಗೂ ಸಾಹಿತ್ಯದರ್ಶನ’, ’ಬಾರೋ ಸಾಧನಕೇರಿಗೆ’, ’ಕುಮಾರವ್ಯಾಸ’, ’ಉರಿಯ ನಾಲಗೆ’, ’ಪ್ರತ್ಯಭಿಜ್ಞಾನ’, ’ಕನ್ನಡ ಸಾಹಿತ್ಯ ಸಂಗಾತಿ’, ’ಸಂಸ್ಕೃತಿ ಸ್ಪಂದನ’ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮೊದಲಾದ ಹಲವು ಪುರಸ್ಕಾರಗಳು ಇವರಿಗೆ ಲಭಿಸಿವೆ. ಇವರು ೨೦೦೩ರಲ್ಲಿ ನಿಧನರಾದರು.